ಶೀತಲನಾಥ ಸ್ವಾಮಿಯ ಬಸದಿಯು ಕರ್ನಾಟಕದ ಜೈನ ಬಸದಿಗಳಲ್ಲೊಂದು. == ಸ್ಥಳ == ಪ್ರಕೃತಿ ರಮಣೀಯವಾದ ಪರಿಸರದ ನಡುವೆ ಸ್ಥಾಪಿತವಾದ ಈ ಬಸದಿಯು ಮಂಗಳೂರು ತಾಲೂಕಿನ ಮೂಡಬಿದರೆಯಲ್ಲಿದೆ. ಈ ಬಸದಿಯ ಮೂಲಸ್ವಾಮಿ ಶ್ರೀ ಶೀತಲನಾಥ ಸ್ವಾಮಿ ತೀರ್ಥಂಕರ. ಇಲ್ಲಿಗೆ ಹತ್ತಿರದ ಬಸದಿ ಚೋಳ ಶೆಟ್ಟಿ ಬಸದಿ. == ಇತಿಹಾಸ == ಮೊದಲು ಇಲ್ಲಿ ಶ್ರೀ ಚಂದ್ರನಾಥ ಸ್ವಾಮಿಯ ವಿಗ್ರಹವಿತ್ತಂತೆ. ಬಸದಿಯ ಮೂಲನಾಯಕನ ವಿಗ್ರಹ ಬಿಳಿ ಕೆಂದಾಳಿ ಬಣ್ಣದ್ದಾಗಿದ್ದು, ಸುಮಾರು ಐದು ಅಡಿ ಎತ್ತರ ಇದೆ. ಕಲ್ಲು ಬಸದಿಯಲ್ಲಿ ತಾ. ೨೫.೧೨.೧೯೮೭ ಮೊದಲು ಪ್ರತಿಷ್ಠಾಪನೆಗೊಂಡವರು ತೀರ್ಥಂಕರ ಚಂದ್ರಪ್ರಭಾ, ಎರಡನೆಯದಾಗಿ ಪ್ರತಿಷ್ಠಾಪನೆಗೊಂಡವರು ತೀರ್ಥಂಕರ ಶ್ರೀ ಶೀತಲನಾಥ ಸ್ವಾಮಿ. ಇದಕ್ಕೆ ೧೬ ನೇ ಶತಮಾನದ ಹಿನ್ನಲೆ ಇದೆ. == ಆವರಣ == ಬಸದಿಯ ಗರ್ಭಗೃಹದಿಂದ ಹೊರಗಡೆ ಬರುತ್ತಿದ್ದಂತೆ ಗಂಧಕುಟಿ(ಗರ್ಭಗೃಹದಲ್ಲಿಯೇ ಇದೆ) ಪ್ರಾರ್ಥನಾ ಮಂಟಪ, ನಮಸ್ಕಾರ ಮಂಟಪ, ತೀರ್ಥಂಕರ ಮಂಟಪ, ಮತ್ತು ಬಳಿಯಲ್ಲಿ ಪ್ರತ್ಯೇಕವಾಗಿ ನೈವೇದ್ಯ ಕೋಣೆ ಮುಂತಾದವುಗಳನ್ನು ಕಾಣಬಹುದು. ಬಸದಿಯ ಹೊರಗಡೆ ಬರುತ್ತಿರುವಂತೆ ನಾವು ಗೋಪುರಗಳನ್ನು ಕಾಣಬಹುದು. ಅಲ್ಲಿ ಕಲ್ಲಿನ ಸುಂದರ ಕಂಬಗಳನ್ನು ಕಾಣಬಹುದು. ಅದರಲ್ಲಿ ಹಳೆಗನ್ನಡದಲ್ಲಿ ಬರೆದ ಶಿಲೆಯನ್ನು ಕಾಣಬಹುದು. ಇದರ ಗೋಡೆಗಳ ಮೇಲೆ ಯಾವುದೇ ರೀತಿಯ ಚಿತ್ರಗಳಿಲ್ಲ. ಬಸದಿಯ ಎದುರುಗಡೆ ಮಾನಸ್ತಂಭ ಇದೆ. ಬಸದಿಯಲ್ಲಿ ದ್ವಾರಪಾಲಕರ ಬಣ್ಣದ ಚಿತ್ರಗಳಿವೆ. ಬಸದಿಯ ಬಲದಲ್ಲಿ ಕ್ಷೇತ್ರ ಪಾಲನ ಸನ್ನಿಧಾನವೂ ಇದೆ.ಪಕ್ಕದಲ್ಲಿ ನಾಗನ ಮೂರ್ತಿಯನ್ನು ನಾವು ಕಾಣಬಹುದು. ಸುತ್ತಲೂ ಸುಂದರವಾದ ಸ್ವಚ್ಛ ಅಂಗಳವಿದೆ. == ಧಾರ್ಮಿಕ ಕಾರ್ಯಗಳು == ಈ ಬಸದಿಗೆ ಮೇಗಿನ ನೆಲೆ ಇಲ್ಲ. ಶ್ರೀ ಪದ್ಮಾವತಿ ಅಮ್ಮನವರ ಮೂರ್ತಿಯನ್ನು ಕಾಣಬಹುದು. ಇದು ಪೂರ್ವಾಭಿಮುಖವಾಗಿದೆ. ಒಳಾಂಗಣದಲ್ಲಿ ಕ್ಷೇತ್ರಪಾಲನ ಸನ್ನಿಧಿ ಇದೆ. ಈ ಬಸದಿಯಲ್ಲಿ ಗಣಧರ ಪಾದದ ಅಚ್ಚು ಕಂಚಿನದು. ಈ ಬಸದಿಯಲ್ಲಿ ಬೆಳಗ್ಗೆ ಮಾತ್ರ ಪೂಜೆ. ಪದ್ಮಾವತಿ ಅಮ್ಮನವರಿಗೆ ಅಲಂಕಾರದೊಂದಿಗೆ ಕುಂಕುಮ, ಬಳೆ ಇಟ್ಟು ಪೂಜೆ ಮಾಡುತ್ತಾರೆ. ಕುಕ್ಕುಟ ಸರ್ಪ ಮೂರು ಹೆಡೆಯದ್ದು. ಬಸದಿಯ ಗಂಧಕುಟಿಯಲ್ಲಿ ಬೇರೆ ಬೇರೆ ಮೂರ್ತಿಗಳಿವೆ. ಶೀತಲನಾಥ ಸ್ವಾಮಿ ಮೂರ್ತಿಗೆ ಜಲ, ಕ್ಷೀರ, ಪಂಚಾಮೃತ, ಸಿಯಾಳ ಇತ್ಯಾದಿಗಳನ್ನು ಬಳಸಿಕೊಂಡು ಅಭಿಷೇಕ ಮಾಡಲಾಗುತ್ತದೆ. ಶೀತಲ ಎಂದರೆ ತಂಪು ತಂದಾಳಿ, ಸಿಯಾಳ ಪ್ರಿಯ ಆದ್ದರಿಂದ ಸ್ವಾಮಿಗೆ ಅದರಿಂದ ಅಭಿಷೇಕ ಮಾಡಲಾಗುತ್ತದೆ. ಗಂಧಕುಟಿಯಲ್ಲಿ ೨೪ ತೀರ್ಥಂಕರರು ಇದ್ದಾರೆ. ಮಧ್ಯಾಹ್ನ ತೀರ್ಥಂಕರರಿಗೆ ಪೂಜೆ ನಡೆಯುತ್ತದೆ. ಇಲ್ಲಿರುವ ಯಕ್ಷ ಅರುಣ ಯಕ್ಷಿ ಸುಗಂಧಿನಿ. ಈ ಬಸದಿಯಲ್ಲಿ ಬ್ರಹ್ಮದೇವರ ಮೂರ್ತಿಯು ಇದೆ. ಬ್ರಹ್ಮದೇವರಿಗೆ ಗುರುವಾರದಂದು ವಿಶೇಷ ಪೂಜೆಯನ್ನು ಮಾಡುತ್ತಾರೆ. ಈ ಬಸದಿಯ ಭಗವಾನ್ ಮಹಾವೀರಸ್ವಾಮಿಗೆ ದೀಪಾವಳಿಯ ಪಾಡ್ಯದ ದಿವಸ ವಿಶೇಷ ಪೂಜೆ ನಡೆಯುತ್ತದೆ. == ಉಲ್ಲೇಖಗಳು ==